ಒತ್ತಡಕ್ಕೆ ಮಣಿದು ಕಾನೂನು ಬಾಹಿರ ನಿರ್ಧಾರ ಕೈಗೊಳ್ಳದಿರಿ: ಅಧಿಕಾರಿಗಳಿಗೆ ಬೊಮ್ಮಾಯಿ ಸೂಚನೆ ಒತ್ತಡಕ್ಕೆ ಮಣಿದು ಯಾವುದೇ ಕಾನೂನು ಬಾಹಿರ ನಿರ್ಧಾರ ಕೈಗೊಳ್ಳಬೇಡಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಬಿಜೆಪಿ ಸಂಸದರಾಗಿ ನೂತನವಾಗಿ ಆಯ್ಕೆಯಾಗಿರುವ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ಸೂಚಿಸಿದರು. ಹಾವೇರಿ: ಒತ್ತಡಕ್ಕೆ ಮಣಿದು ಯಾವುದೇ ಕಾನೂನು ಬಾಹಿರ ನಿರ್ಧಾರ ಕೈಗೊಳ್ಳಬೇಡಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಬಿಜೆಪಿ ಸಂಸದರಾಗಿ ನೂತನವಾಗಿ ಆಯ್ಕೆಯಾಗಿರುವ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ಸೂಚಿಸಿದರು.ಶಿಗ್ಗಾಂವಿಯಲ್ಲಿ ಯೋಜನೆಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೆಹಲಿಯಲ್ಲೇ ಇರಲಿ, ಹಾವೇರಿಯಲ್ಲೇ ಇರಲಿ ಶಿಗ್ಗಾಂವಿ ಕ್ಷೇತ್ರದ ಮೇಲೆ ಸದಾ ಕಣ್ಣಿಡುತ್ತೇನೆ. ಅಧಿಕಾರಿಗಳು ಒತ್ತಡಕ್ಕೆ ಮಣಿದು ಅಕ್ರಮ ಎಸಗಬಾರದು. ನಾನೇ ಹೇಳಿದರೂ ಅದು ಕಾನೂನುಬದ್ಧವಾಗಿಲ್ಲದಿದ್ದರೆ ಆ ಕೆಲಸವನ್ನು ಮಾಡಬಾರದು. ಶಿಗ್ಗಾಂವಿ-ಸವಣೂರು ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವುದೇ ನನ್ನ ಉದ್ದೇಶವಾಗಿದ್ದು, ಉತ್ತಮ ಅಧಿಕಾರಿಗಳನ್ನು ಸದಾ ರಕ್ಷಿಸುತ್ತೇನೆ. 15 ವರ್ಷಗಳ ಹಿಂದೆ ಇಲ್ಲಿ ಉತ್ತಮ ರಸ್ತೆಗಳಿರಲಿಲ್ಲ, ಕುಡಿಯುವ ನೀರಿನ ಸಮಸ್ಯೆ ಇತ್ತು. ಆದರೆ ಈಗ ಚಿತ್ರಣ ಬದಲಾಗಿದೆ ಎಂದು ಹೇಳಿದರು.ಬಡವರು, ಮಹಿಳೆಯರು, ನಿರ್ಗತಿಕರು, ಸರ್ಕಾರಿ ಯೋಜನೆಗಳ ಫಲಾನುಭವಿಗಳು ಕಚೇರಿಗಳಿಗೆ ಬಂದಾಗ ಸೌಜನ್ಯದಿಂದ ವರ್ತಿಸಬೇಕು ಮತ್ತು ಕಾನೂನಿನ ವ್ಯಾಪ್ತಿಯಲ್ಲಿ ಸಾಧ್ಯವಾದಷ್ಟು ಸಹಾಯ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ಈಗ ಪ್ರತಿಯೊಬ್ಬರಿಗೂ ಕಾನೂನಿನ ಅರಿವಿದೆ ಮತ್ತು ಯಾರೂ ನಿಯಮಗಳು ಮತ್ತು ನಿಬಂಧನೆಗಳನ್ನು ಉಲ್ಲಂಘಿಸಿ ಕೆಲಸ ಮಾಡಬಾರದು. ಅದೇ ಸಮಯದಲ್ಲಿ, ಅಧಿಕಾರಿಗಳು ಕಚೇರಿಗೆ ಬರುವವರೊಂದಿಗೆ ಮಾನವೀಯವಾಗಿ ವರ್ತಿಸಬೇಕು ಎಂದು ತಿಳಿಸಿದರು.ಕಳೆದ 15 ವರ್ಷಗಳಲ್ಲಿ ಸವಣೂರಿನಲ್ಲಿ ಯಾವುದೇ ಕೋಮು ಘರ್ಷಣೆ ನಡೆದಿಲ್ಲ. ಇದಕ್ಕೂ ಮುನ್ನ ಇಲ್ಲಿಗೆ ಬರಲು ಪೊಲೀಸರೂ ಕೂಡ ಹೆದರುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಶಿಗ್ಗಾಂವಿಯಲ್ಲಿ ಅಭಿವೃದ್ಧಿಗೆ ಹಿನ್ನೆಡೆಯಾಗಿದೆ. ಹಿಂದಿನ ಬಿಜೆಪಿ ಸರ್ಕಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಿದ್ದು, ಆದ್ಯತೆ ಮೇರೆಗೆ ಕಾಮಗಾರಿ ಪೂರ್ಣಗೊಳಿಸಬೇಕು. ಅಧಿಕಾರಿಗಳು ಪ್ರಗತಿ ಮತ್ತು ಬಾಕಿಯಿರುವ ಕಾಮಗಾರಿಗಳನ್ನು ಪರಿಶೀಲಿಸಬೇಕು, ಇದರಿಂಂದ ಗುರಿಯನ್ನು ಸಾಧಿಸಲು ಸಹಾಯವಾಗುತ್ತದೆ. ರಾಜ್ಯ ಸರ್ಕಾರದ ಯೋಜನೆಗಳು ಗ್ರಾಮೀಣ ಮಹಿಳೆಯರಿಗೆ ತಲುಪುತ್ತಿಲ್ಲ, ಇದನ್ನು ಪರಿಶೀಲಿಸಬೇಕು. ರಾಜ್ಯ ಸರ್ಕಾರದಿಂದ ಹಣದ ಗ್ಯಾರಂಟಿ ಇಲ್ಲದಿರುವುದರಿಂದ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಪೊಲೀಸ್ ಅಧಿಕಾರಿಗಳು ನಾಗರಿಕರ ಸಮಸ್ಯೆ ಬಗೆಹರಿಸಲು ವಿಫಲರಾದರೆ ಕ್ರಮ ಕೈಗೊಳ್ಳಲಾಗುವುದು ಎಂದೂ ಇದೇ ವೇಳೆ ಎಚ್ಚರಿಸಿದರು.